ನಿನ್ನೆಯಷ್ಟೆ ಅಂದರೇ ಜ.22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ಎಂದು ಹೇಳಲಾಗುವ ಅಯೋಧ್ಯೆ ರಾಮಮಂದಿರ ಇದೀಗ ಲೋಕಾರ್ಪಣೆಯಾಗಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ ಬಾಲರಾಮನ ವಿಗ್ರಹ ಮೂರ್ತಿ ಎಲ್ಲರನ್ನೂ ತುಂಬಾನೆ ಸೆಳೆಯುತ್ತಿದೆ. ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಈ ದೈವಿಕ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಸಹ ಭಾಗಿಯಾಗಿದ್ದು, ಅಯೋಧ್ಯೆ ರಾಮಮಂದಿರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿಮಾರ್ಣಗೊಂಡ ರಾಮಮಂದಿರ ಜ.22 ರಂದು ಲೋಕಾರ್ಪಣೆಯಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು, ಸಿನೆಮಾ ತಾರೆಯರು, ಕ್ರೀಡಾಪಟುಗಳು, ಸಾಧು ಸಂತರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಿನಿರಂಗದ ಸ್ಟಾರ್ ಗಳಾದ ಅಮಿತಾಬ್, ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ರಿಷಭ್ ಶೆಟ್ಟಿ, ಕಂಗನಾ ರಾಣಾವತ್, ರಾಮ್ ಚರಣ್, ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನೂ ಈ ದೈವಿಕ ಕಾರ್ಯಕ್ರಮದ ಬಗ್ಗೆ ಚಿರಂಜೀವಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ನಟ ಮೆಗಾಸ್ಟಾರ್ ಚಿರಂಜೀವಿ ದಂಪತಿ ಹಾಗೂ ರಾಮ್ ಚರಣ್ ಪ್ರತ್ಯೇಕ ವಿಮಾನದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ತಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿರುವ ಬಗ್ಗೆ ಅವರು ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ದೊಡ್ಡ ದೈವಿಕ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ನನ್ನ ಇಷ್ಟದೈವ ಹನುಮಾನ್. ಸ್ವತಃ ಅವರೇ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಂತಿದೆ. ಈ ಸಂತೋಷವನ್ನು ನಾನು ಮಾತುಗಳಲ್ಲಿ ಹೇಳಲಾರೆ. ಅಯೋಧ್ಯ ರಾಮಮಂದಿರ ಕನಸು ಸಾಕಾರಗೊಳಿಸಿದ ಎಲ್ಲರನ್ನೂ ಪ್ರೋತ್ಸಾಹಿಸದೇ ಇರಲಾರೆನು ಎಂದಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಜನಸೇನಾ ಮುಖ್ಯಸ್ಥ ನಟ ಪವನ್ ಕಲ್ಯಾಣ್ ರವರು ಸಹ ಹೋಗಿದ್ದರು. ಈ ವೇಳೆ ಅವರು ರಾಮ ಮಂದಿರ ಮುಂಭಾಗ ಸೆಲ್ಫಿ ತೆಗೆದುಕೊಂಡಿದ್ದು, ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದೇ ಮಾದರಿಯಲ್ಲಿ ಚಿರಂಜೀವಿ ದಂಪತಿ ಹಾಗೂ ರಾಮ್ ಚರಣ್ ಕ್ರೀಡಾಪಟು ಪಿ.ಟಿ.ಉಷಾ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಈ ಪೊಟೋ ಸಹ ವೈರಲ್ ಆಗುತ್ತಿದೆ.