ಸದ್ಯ ದೇಶದ ಅನೇಕ ಕಡೆ ನೀರಿಗಾಗಿ ತುಂಬಾ ಸಮಸ್ಯೆಯಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗಾಗಿ ದೊಡ್ಡ ಮಟ್ಟದಲ್ಲೇ ಪರದಾಟ ಶುರುವಾಗಿದೆ. ಇದೀಗ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ನೀರಿನ ಸಂರಕ್ಷಣೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ನೀರಿನ ಬಗ್ಗೆ ಅವರ ಕಾಳಜಿಗೆ ಹಾಗೂ ಕನ್ನಡದಲ್ಲಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಬೆಂಗಳೂರನ್ನು ಉದ್ಯಾನ ನಗರಿ ಎಂದೇ ಕರೆಯಲಾಗುತ್ತಿತ್ತು. ಇದೀಗ ಬೆಂಗಳೂರಿನಲ್ಲಿ ನೀರಿಗೆ ಅಭಾವ ಸೃಷ್ಟಿಯಾಗಿದೆ. ಬೆಂಗಳೂರಿನ ನೀರಿನ ಸಮಸ್ಯೆ ಇದೀಗ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ. ಈ ನಡುವೆ ಬಿಬಿಎಂಪಿ ಹಾಗೂ ಜಲಮಂಡಳಿ ಸಹ ನೀರನ್ನು ಮಿತವಾಗಿ ಬಳಸುವ ನಿಟ್ಟಿನಲ್ಲಿ ಹಾಗೂ ನೀರು ಪೋಲಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನಲ್ಲಿ ನಟ ಚಿರಂಜೀವಿಯವರು ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲಿ ನೀರನ್ನು ಸಂರಕ್ಷಣೆ ಮಾಡಲು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಭವಿಷ್ಯಕ್ಕಾಗಿ ನೀರಿನ ಬಿಕ್ಕಟ್ಟನ್ನು ತಡೆಗಟ್ಟಲು ಯಾವ ರೀತಿಯ ಪರಿಹಾರಗಳನ್ನು ಕಂಡುಹಿಡಿಯಬೇಕೆಂಬುದನ್ನು ಒತ್ತಿ ಹೇಳಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ನೀರಿನ ಸಮಸ್ಯೆ ಎದ್ದು ಕಾಣಿಸುತ್ತಿದೆ. ನಟ ಚಿರಂಜೀವಿಯವರ ಫಾರ್ಮ್ ಹೌಸ್ ನಲ್ಲಿ ಸುಮಾರು 20-36ಅಡಿ ಆಳದ ರಿಚಾರ್ಜ್ ಬಾವಿಗಳನ್ನು ಅಂದರೇ ಇಂಗು ಗುಂಡಿಗಳ ಮದರಿಯಲ್ಲಿ ಸ್ಥಾಪನೆ ಮಾಡಿದ್ದಾರೆ. ಪ್ರತಿಯೊಂದು ಗುಂಡಿಯಲ್ಲಿ ಫಿಲ್ಟರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಳೆಗಾಲದಲ್ಲಿ ಭೂಮಿಯ ಮೇಲ್ಮೈ ನೀರಿನ ಹರಿವು ಭೂಮಿಯ ಆಳಕ್ಕೆ ಹೋಗುವಂತೆ ಪ್ಲಾನ್ ಮಾಡಿ ನಿರ್ಮಾಣ ಮಾಡಲಾಗಿದೆ. ಫಾರ್ಮಾಕಲ್ಚರ್ ತತ್ವಗಳನ್ನು ಜಾರಿಗೆ ತಂದಿದ್ದಾರೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀರನ್ನು ಸಂರಕ್ಷಣೆ ಮಾಡಬಹುದು. ಅದೇ ಮಾದರಿಯಲ್ಲಿ ಮಳೆ ನೀರು ಕೊಯ್ಲು ಸಹ ಉತ್ತಮಗೊಳಿಸಬಹುದು ಎಂದು ಅನೇಕ ವಿಚಾರಗಳನ್ನು ತಮ್ಮ ಟ್ವೀಟ್ ನಲ್ಲಿ ಸಮಗ್ರವಾಗಿ ಬರೆದಿದ್ದಾರೆ. ಜೊತೆಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದ ಪೊಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯ.
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ… pic.twitter.com/HwoWhSiZW5
— Chiranjeevi Konidela (@KChiruTweets) March 26, 2024
ಇನ್ನೂ ನಟ ಚಿರಂಜೀವಿ ಹಂಚಿಕೊಂಡ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನೀರಿನ ಸಂರಕ್ಷಣೆ ಯ ಬಗ್ಗೆ ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ಅನೇಕರು ಪ್ರಶಂಸೆ ಮಾಡುತ್ತಿದ್ದಾರೆ. ಅದರಲ್ಲೂ ಅವರ ಪೋಸ್ಟ್ ಕನ್ನಡದಲ್ಲಿದ್ದು, ಅನೇಕ ಕನ್ನಡಿಗರ ಮನ ಗೆದ್ದಿದೆ ಎನ್ನಲಾಗುತ್ತಿದೆ. ಸದ್ಯ ಚಿರಂಜೀವಿಯವರು ವಿಶ್ವಂಭರ ಎಂಬ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.