ಅನೈತಿಕ ಸಂಬಂಧಗಳ ಕಾರಣದಿಂದ ಅನೇಕ ಜೀವಗಳು ಬಲಿಯಾಗಿದೆ. ಅಂತಹ ಘಟನೆಗಳು ಆಗಾಗ ಮರುಕಳುಸುತ್ತಿರುತ್ತವೆ. ಈ ಹಾದಿಯಲ್ಲೆ ಅನೈತಿಕ ಸಂಬಂಧದ ಕಾರಣದಿಂದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ತನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡವನನ್ನು ಕರೆದು ಸಹವಾಸ ಬಿಟ್ಟು ಬಿಡು ಎಂದು ಹೇಳಿದ್ದರೂ, ತನ್ನ ಚಾಳಿ ಬಿಡದ ವ್ಯಕ್ತಿ ಸಂಬಂಧ ಮುಂದುವರೆಸಿದ್ದನ್ನು ಸಹಿಸಲಾರದೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತಬ್ರೇಜ್ (35) ಎಂದು ಗುರ್ತಿಸಲಾಗಿದೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ತಬ್ರೇಜ್ ಎಂಬಾತನನ್ನು ಶಬ್ಬೀರ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಶಬ್ಬೀರ್ ತನ್ನ ಪತ್ನಿ ನೂರ್ ಆಯಿಷಾ ಜೊತೆಗೆ ತಬ್ರೇಜ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ತಬ್ರೇಜ್ ಹಾಗೂ ಶಬ್ಬೀರ್ ನಡುವೆ ಗಲಾಟೆಯಾಗಿದ್ದು, ಆಕೆಯನ್ನು ಬಿಟ್ಟು ಬಿಡುವಂತೆ ಎಚ್ಚರಿಕೆ ನೀಡಿದ್ದಾನೆ. ಜೊತೆಗೆ ಈ ಸಂಬಂಧ ಹಲವು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು ಎನ್ನಲಾಗಿದೆ. ಅನೈತಿಕ ಸಂಬಂಧ ಬಿಡುವಂತೆ ನೂರ್ ಆಯಿಷಾ ಹಾಗೂ ತಬ್ರೇಜ್ ಇಬ್ಬರಿಗೂ ಬುದ್ದಿವಾದ ಹೇಳಿದ್ದರಂತೆ. ಆದರೂ ಸಹ ಅವರ ಚಾಳಿ ಮುಂದುವರೆಸಿದ್ದರು ಎನ್ನಲಾಗಿದೆ.
ಕೆಲವು ಬಾರಿ ಅನೈತಿಕ ಸಂಬಂಧ ಕೊನೆಗೊಳಿಸುವಂತೆ ಸ್ವತಃ ಶಬ್ಬೀರ್ ಎಚ್ಚರಿಕೆ ಸಹ ನೀಡಿದ್ದಾನೆ. ಆದರೆ ತಬ್ರೇಜ್ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ. ಈ ಕಾರಣದಿಂದ ತಬ್ರೇಜ್ ನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡ ಶಬ್ಬೀರ್ ಮತ್ತೆ ಸಂಧಾನಕ್ಕೆಂದು ಕರೆಸಿದ್ದಾರೆ. ತಿಲಕ ನಗರದ 37ನೇ ಕ್ರಾಸ್ ನ ಕೃಷ್ಣ ಬೇಕರಿ ಬಲಿ ತಬ್ರೇಜ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಶಬ್ಬೀರ್ ಹಾಗೂ ಆತನ ಗ್ಯಾಂಗ್ ತಬ್ರೇಜ್ ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.