ಉತ್ತರ ಪ್ರದೇಶದ ಜೌನ್ ಪುರದ ಶಹಗಂಜ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಗುಪುರ್ ಕಲಾ ಎಂಬ ಗ್ರಾಮದಲ್ಲಿ 72 ವರ್ಷದ ಅಜ್ಜಿಯೊಬ್ಬರ ನಾಗರಹಾವಿನಿಂದ ತನ್ನ ಮೊಮ್ಮಗಳನ್ನು ರಕ್ಷಿಸಲು ತನ್ನ ಪ್ರಾಣವನ್ನೆ ಕೊಟ್ಟಿದ್ದಾರೆ. ಮೊಮ್ಮಗಳ ಜೊತೆ ಮಲಗಿದ್ದ ಅಜ್ಜಿಯ ಮಂಚದ ಬಳಿ ನಾಗರಹಾವು ಬಂದಿದ್ದು, ಹಾವನ್ನು ನೋಡಿದ ಅಜ್ಜಿ ಹಾವನ್ನು ಹಿಡಿಕೊಂಡಿದ್ದಾಳೆ. ಆಗ ಹಾವು ಕಚ್ಚಿ ವೃದ್ದೆ ಮೃತಪಟ್ಟಿದ್ದಾಳೆ.
ಉತ್ತರ ಪ್ರದೇಶದ ಅರ್ಗುಪುರ್ ಕಾಲಾ ಗ್ರಾಮದ ನಿವಾಸಿಯಾದ 72 ವರ್ಷದ ವೃದ್ದೆ ಸೀತಾದೇವಿ ಎಂಬುವವರು ಊಟ ಮಾಡಿ ತನ್ನ 24 ವರ್ಷ ಮೊಮ್ಮಗಳೊಂದಿಗೆ ಮಲಗಿದ್ದರು. ತಡರಾತ್ರಿ ಸಮಯದಲ್ಲಿ ನಾಗರ ಹಾವೊಂದು ಅವರು ಮಲಗಿ ಮಂಚದ ಮೇಲೆ ಹತ್ತಿತ್ತು. ಹಾವು ಬಂದಿರುವ ಬಗ್ಗೆ ಅಜ್ಜಿಗೆ ಅರಿವಾಗಿದೆ. ಎದ್ದು ನೋಡಿದಾಗ ಮೊಮ್ಮಗಳ ಬಳಿ ಹಾವನ್ನು ಕಂಡಿದ್ದಾರೆ. ಕೂಡಲೇ ವೃದ್ದೆ ಜೋರಾಗಿ ಕೂಗಿ ಆ ನಾಗರ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಹಾವನ್ನು ಹಿಡಿದ ಕೂಡಲೇ ಹಾವು ಭಯದಿಂದ ವೃದ್ದೆಯನ್ನು ಕಚ್ಚಿದೆ. ವೃದ್ದೆ ಕಿರುಚಿದ ಕೂಡಲೇ ಕುಟುಂಬಸ್ಥರು ಸಹ ಸ್ಥಳಕ್ಕೆ ಧಾವಿಸಿದ್ದಾರೆ. ಹಾವು ಕಚ್ಚಿದ ವೃದ್ದೆಯನ್ನು ಚಿಕಿತ್ಸೆಗಾಗಿ ಖಾಸಗಿ ನರ್ಸಿಂಗ್ ಹೋಂ ಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ
ಇನ್ನೂ ವೃದ್ದೆ ಮೃತಪಟ್ಟಿರುವ ಸುದ್ದಿ ಕೇಳಿ ಆಕೆಯ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಆದರೆ ವೃದ್ದೆಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮುಗಿಸಿದ್ದಾರೆ. ಇನ್ನೂ ಅಜ್ಜಿಯ ಈ ಸಾವಿನ ಬಗ್ಗೆ ಚರ್ಚೆಗಳೂ ಸಹ ನಡೆಯುತ್ತಿವೆ. ತನ್ನ ಪ್ರಾಣವನ್ನು ಲೆಕ್ಕಿಸದೇ ವೃದ್ದೆ ತನ್ನ ಮೊಮ್ಮಗಳ ಜೀವ ಉಳಿಸಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೃದ್ದೆಯ ಧೈರ್ಯವನ್ನು ಹೊಗಳುತ್ತಿದ್ದಾರೆ.