ಲೋಕಸಭಾ ಚುನಾವಣೆ 2024 ಅಂಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಜನ ಸಾಮಾನ್ಯರ ಜೊತೆಗೆ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರೆಟಿಗಳು ಮತ ಚಲಾಯಿಸಿದ್ದಾರೆ. ತಾವು ಮತ ಚಲಾಯಿಸುವುದರ ಜೊತೆಗೆ ಸಂದೇಶವನ್ನು ನೀಡಿದ್ದಾರೆ. ಮತದಾನ ಹಾಗೂ ಅದರ ಮಹತ್ವದ ಬಗ್ಗೆ ಸಂದೇಶ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಹೇಳಿದ್ದು ಹೀಗೆ: ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಜೊತೆಗೆ ಆಗಮಿಸಿ ವೋಟ್ ಮಾಡಿದ್ದಾರೆ. ವೋಟ್ ಮಾಡಿದ ಬಳಿಕ ಮಾತನಾಡಿದ ಅವರು ದೇಶದ ಮೇಲೆ ಪ್ರೀತಿ ಇರುವಂತಹವರು ವೋಟ್ ಮಾಡುತ್ತಾರೆ. ಬರದೇ ಇರುವವರ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಾ. ದೇಶದ ಮೇಲೆ ಪ್ರೀತಿ ಇರುವಂತಹವರು ವೋಟ್ ಹಾಕಬೇಕು. ಕೆಲವರಿಗೆ ಹೇಳಿದರೂ ವೋಟ್ ಹಾಕಲ್ಲ. ಅಂತಹವರನ್ನು ಏನು ಮಾಡೋಕೆ ಆಗುತ್ತೆ, ಯಾರು ಬಂದು ವೋಟ್ ಹಾಕುತ್ತಾರೆ. ಅವರಿಗೆ ಗೌರವ ಕೊಡೋಣ, ಎಲ್ಲರೂ ತಪ್ಪದೇ ತಮ್ಮ ಚಲಾಯಿಸಬೇಕು ಎಂದಿದ್ದಾರೆ.
ವೋಟ್ ಮಾಡದವರು ಬ್ಲೇಮ್ ಮಾಡೋದು ಸರಿಯಲ್ಲ ಎಂದ ರಚಿತಾ ರಾಮ್: ಇನ್ನೂ ನಟಿ ರಚಿತಾ ರಾಮ್ ತಮ್ಮ ಮತ ಚಲಾಯಿಸಿದ್ದಾರೆ. ಮನೆಯಲ್ಲಿ ಕುಳಿತುಕೊಂಡು ಕಾಮೆಂಟ್ ಮಾಡುವುದಕ್ಕಿಂದ ಬಂದು ವೋಟ್ ಮಾಡಿ, ವೋಟ್ ಮಾಡದವರು ಬ್ಲೇಮ್ ಮಾಡಬೇಡಿ. ನಮ್ಮ ನಾಯಕರನ್ನು ಅಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರದೇ, ಸಂಜೆಯವರೆಗೂ ಸಮಯ ಇದೆ ಬಂದು ವೋಟ್ ಮಾಡಿ, ಹಿರಿಯ ನಾಗರೀಕರೇ ಬಂದು ವೋಟ್ ಮಾಡುತ್ತಿದ್ದಾರೆ. ಯುವಕರು ಏಕೆ ಮನೆಯಲ್ಲಿ ಕೂತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆ: ಮತ ಚಲಾಯಿಸುವುದು ನಮ್ಮ ಕರ್ತವ್ಯ, ನಾವು ವೋಟ್ ಮಾಡಲೇಬೇಕು. ನಮಗೆ ಯಾವಾಗ ವೋಟ್ ಮಾಡೋಕೆ ಅವಕಾಶ ಸಿಗುತ್ತೋ ಆಗಿಂದಲೇ ಮತದಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಂದು ಹಂತದಲ್ಲಿ ನಿರ್ಧಾರ ತೆಗೆದುಕೊಂಡು ಮತದಾನಕ್ಕೆ ಮುಂದಾಗಬೇಕು. ಕಳೆದ ಬಾರಿಗಿಂತ ಈ ಬಾರಿ ವೋಟ್ ಮಾಡುವವರ ಸಂಖ್ಯೆ ಜಾಸ್ತಿ ಆಗಿದ್ದು, ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ಭಾರತ ಒಳ್ಳೆಯ ಸ್ಥಾನದಲ್ಲಿದೆ. ಇದನ್ನು ಬಳಸಿಕೊಂಡು ನಾವು ಮುಂದೆ ಸಾಗಬೇಕೆಂದು ಎಂದಿದ್ದಾರೆ.
ನಾನು ಮತ ಹಾಕಿದವರು ಗೆಲ್ಲೋದು ಪಕ್ಕಾ ಎಂದ ನಟ ರಕ್ಷಿತ್ ಶೆಟ್ಟಿ: ನಾನು ವೋಟ್ ಹಾಕಿದವರು ಪಕ್ಕಾ ಗೆಲ್ಲುತ್ತಾರೆ. ಅದರಲ್ಲಿ ಅನುಮಾನವೇ ಬೇಡ. ವೋಟು ಹಾಕಿದವರು ಗೆಲ್ಲುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ನಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಮುಂದಿನ ವರ್ಷ ಹೇಳುತ್ತೇನೆ. ಎಲ್ಲಾ ಜನರನ್ನು ಮತಗಟ್ಟೆಗೆ ಕರೆತರುವುದು ಟಫ್ ಟಾಸ್ಕ್. ಅಂತರ್ಜಾಲದ ಮೂಲಕ ಮತ ಚಲಾಯಿಸುವ ವ್ಯವಸ್ಥೆ ಬಂದರೇ 100% ಮತದಾನ ಮಾಡಿಸಬಹುದು. ಸದ್ಯಕ್ಕೆ ನೂರರಷ್ಟು ಮತದಾನ ಮಾಡಿಸುವುದು ಕಷ್ಟ. ನಾನು ವೋಟ್ ಮಾಡೋಕೆ ಊರಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.