ಸುಮಾರು ವರ್ಷಗಳಿಂದ ಚರ್ಚೆಗೆ ಕಾರಣವಾಗಿರುವ ಮಥುರಾ ಕೃಷ್ಣಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ತರ ಆದೇಶವೊಂದು ನೀಡಿದೆ. ಜ್ಞಾನವ್ಯಾಪಿ ರೀತಿಯಲ್ಲೆ ಮಥುರಾ ಜನ್ಮಭೂಮಿ ಸರ್ವೆಗೆ ಅಲಹಾಬಾದ್ ಕೋರ್ಟ್ ಅನುಮತಿ ನೀಡಿದೆ. ಈ ಅನುಮತಿಯಂತೆ ಮಥುರಾದ ಕೃಷ್ಣಜನ್ಮಭೂಮಿ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಅನುಮತಿ ಸಿಕ್ಕಂತಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಸಜ್ಜಾಗಿದೆ. ಜೊತೆಗೆ ಕಾಶೀ ವಿಶ್ವನಾಥ ಮಂದಿರದ ಆವರಣದಲ್ಲಿನ ಜ್ಞಾನವ್ಯಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೂ ಸಹ ಸಮಯ ಹತ್ತಿರವಿದೆ. ಇದೀಗ ಹಿಂದೂಗಳ ಮತ್ತೊಂದು ಬೇಡಿಕೆಗೆ ಜಯ ಸಿಕ್ಕಂತಾಗಿದೆ. ಮಥುರಾ ಜನ್ಮಭೂಮಿ ಸರ್ವೆಗೆ ಅಲಹಾಬಾದ್ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಈ ಮಹತ್ವದ ಆದೇಶ ನೀಡಿದ್ದಾರೆ. ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ನ್ಯಾಯಾಲಯ ಸೂಚನೆ ನೀಡಿದೆ. ಮೂರು ಮಂದಿ ಅಧಿಕಾರಿಗಳು ಸಮಿತಿಯನ್ನು ರಚಿಸಿ ಸರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಥುರಾದಲ್ಲಿ ಹಿಂದೂ ದೇವಾಲಯವನ್ನು ಬಿಳಿಸಿ ಅಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ ಎಂದು ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಸೇರಿದಂತೆ ಇತರೆ ಏಳು ಮಂದಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿ ಕಂಬಗಳು ಹಿಂದೂ ದೇವಾಲಯದ ಮಾದರಿಯಲ್ಲಿದೆ. ಇದೇ ಕಂಬಗಳಲ್ಲಿ ಹಿಂದೂ ದೇವಾಲಯದ ಚಿಹ್ನೆಗಳು ಕಾಣುತ್ತಿವೆ. ಆದ್ದರಿಂದ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಮಹತ್ವದ ಆದೇಶ ನೀಡಿದ್ದು ಹಿಂದೂಗಳಿಗೆ ಪ್ರಾಥಮಿಕ ಹಂತದ ಜಯ ಸಿಕ್ಕಂತಾಗಿದೆ.