Film News

ಯಶ್ ಹುಟ್ಟುಹಬ್ಬದಂದು ನಡೆದ ಕಟೌಟ್ ದುರಂತದಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ 5 ಲಕ್ಷ ಪರಿಹಾರ ಚೆಕ್ ವಿತರಣೆ….!

ಕೆಲವು ದಿನಗಳ ಹಿಂದೆಯಷ್ಟೆ ರಾಕಿಂಗ್ ಸ್ಟಾರ್‍ ಯಶ್ ಹುಟ್ಟುಹಬ್ಬದ ನಿಮಿತ್ತ ಗದಗದಲ್ಲಿ ಕಟೌಟ್ ನಿಲ್ಲಿಸುವ ಸಮಯದಲ್ಲಿ ವಿದ್ಯುತ್ ತಗುಲಿ ಮೂರು ಮಂದಿ ಯುವಕರು ಮೃತಪಟ್ಟಿದ್ದರು. ಈ ವೇಳೆ ಯಶ್ ಸಹ ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಸಹ ಹೇಳಿದ್ದರು. ಇದೀಗ ಯಶ್ ರವರ ಟೀಂ ಕಡೆಯಿಂದ ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಚೆಕ್ ನೀಡಿದ್ದಾರೆ.

ನಟ ಯಶ್ ಹುಟ್ಟುಹಬ್ಬದ ನಿಮಿತ್ತ ಗದಗದ ಲಂಕೇಶ್ವರ ತಾಲೂಕಿನ ಸೂರಣಗಿ ಎಂಬ ಗ್ರಾಮದಲ್ಲಿ ಕಟೌಟ್ ಹಾಕಲು ಹೋದಾಗ ಈ ದುರ್ಘಟನೆ ನಡೆದಿತ್ತು. ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (19) ಎಂಬುವರು ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ್ದರು. ಇದೇ ಸಮಯದಲ್ಲಿ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ್​ ಹರಿಜನ ಹಾಗೂ ಪ್ರಕಾಶ್​ ಮ್ಯಾಗೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ನಡೆದ ದಿನದಂದು ಯಶ್ ಮೃತರ ಕುಟುಂಬದವರಿಗೆ ಸಾಂತ್ವನ ಸಹ ತಿಳಿಸಿದ್ದರು. ಮೃತರ ಕುಟುಂಬದವರಿಗೆ ಧೈರ್ಯ ತುಂಬಿದ್ದರು. ಇಂದು (ಜ.17) ರಂದು ಯಶ್ ರವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ರವರು ದುರಂತ ಸಂಭವಿಸಿದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳನ್ನು ಕಳೆದುಕೊಂಡ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಪರಿಹಾರ ಧನವಾಗಿ ಐದು ಲಕ್ಷ ಚೆಕ್ ನೀಡಿದ್ದಾರೆ.

ಇನ್ನೂ ಜ.8 ರಂದು ಯಶ್ ಗದಗದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಯುವಕರ ಕುಟುಂಬದವರಿಗೆ ಸಾಂತ್ವನ ಸಹ ಹೇಳಿದ್ದರು. ಬಳಿಕ ಮಾದ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಯಶ್ ಅಭಿಮಾನಿಗಳು ತಮ್ಮ ಅಭಿಮಾನ ತೋರಿಸುವುದಾದರೇ ನಿಮ್ಮ ಬದುಕಿನಲ್ಲಿ ತುಂಬಾ ಖುಷಿಯಾಗಿರಿ. ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ಈ ರೀತಿಯ ಅಭಿಮಾನವನ್ನು ಯಾವುದೇ ನಟ ಇಷ್ಟಪಡುವುದಿಲ್ಲ. ಅಭಿಮಾನಿಗಳು ಸುರಕ್ಷಿತವಾಗಿದ್ದರೇ ನಟರೂ ಸಹ ಖುಷಿಯಾಗಿರುತ್ತಾರೆ. ಮುಂದೆ ಯಾರೂ ಸಹ ಈ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದರು.

Most Popular

To Top