Film News

ಸಂಭವಿಸಬಹುದಾಗಿದ್ದ ವಿಮಾನ ದುರಂತದಿಂದ ಪಾರಾದ ಮಾರ್ಟಿನ್ ಚಿತ್ರತಂಡ, ದೆಹಲಿಗೆ ಹೋಗುವಾಗ ನಡೆದ ಅವಘಡ….!

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹಾಗೂ ಮಾರ್ಟಿನ್ ಚಿತ್ರತಂಡ ವಿಮಾನ ದುರಂತದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಮಾರ್ಟಿನ್​ ಚಿತ್ರತಂಡದವರು ಶ್ರೀನಗರದಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಕ್ರ್ಯಾಶ್ ಆಗಬೇಕಿದ್ದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು, ಚಿತ್ರತಂಡದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸುದ್ದಿಯನ್ನು ಧ್ರುವ ಸರ್ಜಾ ಮತ್ತು ಅವರ ತಂಡದವರು ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ತಿಳಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್ ಆಗಿ ಪ್ರಾಣಾಪಯದಿಂದ ಪಾರಾಗಿದ್ದರು. ಈ ಘಟನೆ ಇನ್ನು ಹಸಿಯಾಗಿರುವಾಗಲೇ ಕನ್ನಡದ ಮಾರ್ಟಿನ್ ಚಿತ್ರತಂಡ ವಿಮಾನ ಅವಘಡದಿಂದ ಪಾರಾಗಿದೆ. ಕನ್ನಡದ ಬಹುನಿರೀಕ್ಷಿತ ಮಾರ್ಟಿನ್ ಸಿನೆಮಾದ ಹಾಡಿನ ಶೂಟಿಂಗ್ ಗಾಗಿ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಚಿತ್ರತಂಡ ತೆರಳಿತ್ತು. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಶ್ರೀನಗರಕ್ಕೆ ಹೋಗುತ್ತಿದ್ದ ವೇಳೆ ವಿಮಾನದಲ್ಲಿ ನಡುಕ ಕಾಣಿಸಿಕೊಂಡಿತ್ತು. ದೇವರ ಕೃಪೆಯಿಂದ ಹಾಗೂ ಅಭಿಮಾನಿಗಳ ಹಾರೈಕೆಯಿಂದ ದೊಡ್ಡ ಅನಾಹುತದಿಂದ ನಾವು ಪಾರಾದೆವು ಎಂದು ಚಿತ್ರತಂಡ ಹೇಳಿದೆ. ಈ ಸಂಬಂಧ ಮಾರ್ಟಿನ್ ಸಿನೆಮಾದ ನಾಯಕ ಧ್ರುವ ಸರ್ಜಾ ವಿಡಿಯೋ ಒಂದನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕೆಟ್ಟ ಹವಾಮಾನ ಹಾಗೂ ತೀವ್ರವಾದ ಮಂಜು ಇರುವ ಕಾರಣದಿಂದ ಮೋಡಗಳ ಮಧ್ಯೆ ವಿಮಾನ ಚಲಿಸಿದಾಗ ವಿಮಾನ ಅಲುಗಾಡಲು ಶುರುವಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಂಡಿದೆ. ಮಾರ್ಟಿನ್ ಸಿನೆಮಾದ ಹಾಡೊಂದರ ಶೂಟಿಂಗ್ ಗಾಗಿ ತೆರಳಿರುವ ಚಿತ್ರತಂಡ ಇದೇ ಫೆ.23 ರಂದು ವಾಪಸ್ ಆಗಲಿದೆ ಎಂದು ತಿಳಿದುಬಂದಿದೆ. ಈ ಸಿನೆಮಾದಲ್ಲಿ ಧ್ರುವಾ ಸರ್ಜಾಗೆ ಜೋಡಿಯಾಗಿ ಅನ್ವೇಷಿ ಜೈನ್ ನಟಿಸುತ್ತಿದ್ದಾರೆ. ಉದಯ್ ಮೆಹ್ತಾ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದು, ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೇನು ಸಿನೆಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಇನ್ನೂ ಘಟನೆಯ ಬಗ್ಗೆ ಧ್ರುವ ಸರ್ಜಾ ಅತ್ತಿಗೆ ನಟಿ ಮೇಘನಾ ರಾಜ್ ಸಹ ರಿಯಾಕ್ಟ್ ಆಗಿದ್ದಾರೆ. ನಾನು ಈಗಷ್ಟೆ ಧ್ರುವ ಜೊತೆ ಮಾತನಾಡಿದ್ದೇನೆ. ಅವರು ಸೇಫ್ ಆಗಿದ್ದಾರೆ. ಮೇಲಿರುವ ದೈವಿಕ ಶಕ್ತಿಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Most Popular

To Top