News

ಕಾರ್ಯನಿರತ ಪತ್ರಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ, ತಮಿಳುನಾಡಿನಲ್ಲಿ ನಡೆದ ಘಟನೆ…..!

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಯಲಾಗುವ ಪತ್ರಿಕಾರಂಗದ ಮೇಲೆ ಆಗಾಗ ದೌರ್ಜನ್ಯಗಳು ಎದುರಾಗುತ್ತಲೇ ಇರುತ್ತದೆ. ಇದೀಗ ತಮಿಳುನಾಡಿನ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ಮೇಲೆ ಗುರುವಾರ (ಜ.25) ರಂದು ಮಾರಣಾಂತಿಕ ದಾಳಿ ನಡೆದಿದ್ದು, ಈ ಘಟನೆ ರಾಜ್ಯದಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಪೊಲೀಸರ ನಿರ್ಲಕ್ಷ್ಯದ ವಿರುದ್ದ ಪತ್ರಕರ್ತರ ಸಂಘ ಸಹ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಖಾಸಗಿ ಸುದ್ದಿವಾಹಿನಿಯೊಂದರ ಪಲ್ಲಡಂ ಹಾಗೂ ಸೂಲೂರು ಪ್ರದೇಶದ ವರದಿಗಾರರಾದ ನೇಸ ಪ್ರಭು ಎಂಬಾತನ ಮೇಲೆ ಅಪರಿಚಿತರ ಗುಂಪು ಧಾಳಿ ನಡೆಸಿದೆ. ಈ ವೇಳೆ ಇಬ್ಬರು ಪತ್ರಕರ್ತರಿಗೆ ಗಂಭೀರ ಗಾಯಗಳಾಗಿದೆ. ಈ ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಧಾಳಿಯನ್ನು ಖಂಡಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳೂ ಸಹ ನಡೆದಿದೆ. ಕೊಯಮತ್ತೂರು, ಧರ್ಮಪುರಿ, ತಿರುವಳ್ಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಹಲ್ಲೆಗೊಳಗಾದ ಪತ್ರಕರ್ತನಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನೂ ಹಲ್ಲೆಗೊಳಗಾದ ಪತ್ರಕರ್ತ ನೇಸಪ್ರಭು ಮೇಲೆ ಧಾಳಿ ನಡೆಯುವ ಸಾಧ್ಯತೆ ಮತ್ತು ಬೆದರಿಕೆಯ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೂ ಸಹ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಪೊಲೀಸರ ನಿರ್ಲಕ್ಯ್ಷದಿಂದಲೇ ಈ ಧಾಳಿ ನಡೆದಿದೆ. ಈ ಕಾರಣದಿಂದ ರಾಜ್ಯದಲ್ಲಿ ಪತ್ರಕರ್ತರ ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆ ಸಹ ನಡೆಯುತ್ತಿದೆ. ರಾಜ್ಯದಾದ್ಯಂತ ಪತ್ರಕರ್ತರು ಕರ್ತವ್ಯದ ಸಮಯದಲ್ಲಿ ಸರ್ಕಾರ ಭದ್ರತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇನ್ನೂ ಈ ಘಟನೆಯ ಕುರಿತು ವಿರೋಧ ಪಕ್ಷಗಳು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ. ಪರಿಸ್ಥಿತಿ ನಿಭಾಯಿಸಲು ತಮಿಳುನಾಡು ಪೊಲೀಸರು ವಿಫಲರಾಗಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಆರೋಪಿಗಳು ಕಾನೂನು ರೀತ್ಯ ಶಿಕ್ಷೆಗೆ ಒಳಪಡಿಸಬೇಕು. ಹಲ್ಲೆಗೆ ಒಳಗಾದ ಪತ್ರಕರ್ತನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್ ಸಹ ಕಳವಳ ವ್ಯಕ್ತಪಡಿಸಿ ದುಷ್ಕರ್ಮಿಗಳ ವಿರುದ್ದ ಕಾನೂನಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಜೊತೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಪತ್ರಕರ್ತರ ಕಲ್ಯಾಣ ಮಂಡಳಿಯಿಂದ ಮೂರು ಲಕ್ಷ ಆರ್ಥಿಕ ಸಹಾಯ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top