ವರ್ಷಕೊಮ್ಮೆ ಮಾತ್ರ ತೆರೆಯುವಂತಹ ಹಾಸನಾಂಬೆಯ ದರ್ಶನಕ್ಕೆ ಅನೇಕ ಭಕ್ತರು ಕಾತುರದಿಂದ ಕಾಯುತ್ತಿರುತ್ತಾರೆ. ದೀಪಾವಳಿ ಸಮಯ ಬಂದರೇ ಸಾಕು ಹಾಸನಾಂಬೆಯ ದರ್ಶನಕ್ಕಾಗಿ ಕಾಯುತ್ತಿರುತ್ತಾರೆ. ರಾಜ್ಯ ಹಾಗೂ ಅಂತರಾಜ್ಯದಿಂದಲೂ ಸಹ ಲಕ್ಷಾಂತರ ಮಂದಿ ದೇವಿಯ ದರ್ಶನಕ್ಕೆ ಆಗಮಿಸುತ್ತಿರುತ್ತಾರೆ. ರಾಜಕೀಯ ಗಣ್ಯರೊಂದಿಗೆ, ಸಿನೆಮಾ ಸ್ಟಾರ್ ಗಳು ಸಹ ದೇವಿಯ ದರ್ಶನಕ್ಕೆ ಬರುತ್ತಾರೆ.
ವರ್ಷಕೊಮ್ಮೆ ಮಾತ್ರ ಹಾಸನದಲ್ಲಿರುವ ಹಾಸನಾಂಬೆಯ ದೇವಾಲಯವನ್ನು ತೆರೆಯಲಾಗುತ್ತದೆ. ಅಶ್ವಯುಜ ಮಾಸದ ಹುಣ್ಣಿಮೆಯ ಬಳಿಕ ಬರುವ ಗುರುವಾರದಂದು ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಬಳಿಕ ಬಲಿಪಾಡ್ಯಮಿಯ ಮಾರನೆ ದಿನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ದೇವಾಲಯದ ಬಾಗಿಲು ಬಂದ್ ಮಾಡಲಾಗುತ್ತದೆ. ನ.2 ರಂದು ಬಾಗಿಲು ತೆರೆದಿದ್ದು, ನ.15 ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ಒಟ್ಟು 14 ದಿನಗಳು ಮಾತ್ರ ಹಾಸನಾಂಬೆ ದೇಗುಲದ ಬಾಗಿಲು ತರೆಯಲಾಗುತ್ತದೆ. ಮೊದಲ ಹಾಗೂ ಕೊನೆಯ ದಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ 12 ದಿನಗಳು ದೇವಿ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಸಿಗಲಿದೆ.
ಇನ್ನೂ ಈ ಬಾರಿ ಭಕ್ತರ ಅನುಕೂಲಕ್ಕಾಗಿ ಕ್ಯೂ ಆರ್ ಕೋಡ್ ವ್ಯವಸ್ಥೆ, ಇ ಹುಂಡಿಯನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಫರ್ಧೆ, ಹೆಲಿ ಟೂರಿಸಂ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಸಹ ಇದೆ ಎನ್ನಲಾಗಿದೆ. ದಿನದ 24 ಗಂಟೆಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಿದ್ದತೆ ಕಲ್ಪಿಸಲಾಗಿದೆ ಎನ್ನಲಾಗಿದೆ. ಜೊತೆಗೆ ವಿಐಪಿ, ವಿವಿಐಪಿ ವಿಶೇಷ ನೇರ ದರ್ಶನಕ್ಕೆ ಸಹ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹಾಸನಾಂಬೆ ಹುತ್ತದ ರೂಪದಲ್ಲಿ ಆದಿಶಕ್ತಿ ಸ್ವರೂಪಿಣಿಯಾಗಿ ದರ್ಶನ ನೀಡುತ್ತಾರೆ. ಹಿಂದಿನ ವರ್ಷ ಹಚ್ಚಿದ ದೀಪ ಆರದೇ, ದೇವಿಗೆ ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿ ಅನವಾಗಿರುತ್ತದೆ. ಇದು ಅಲ್ಲಿನ ಪವಾಡ ಎಂದೇ ಕರೆಯಬಹುದು.