ದೇಶದಾದ್ಯಂತ ಲೋಕಸಭಾ ಚುನಾವಣೆಯ ನಿಮಿತ್ತ ವಿವಿಧ ಪಕ್ಷಗಳ ಮುಖಂಡರುಗಳು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕರ್ನಾಟಕದ ಸಿಎಂ ಸಿದ್ದರಾಯಮಯ್ಯ ಕಾಂಗ್ರೇಸ್ ಪಕ್ಷದ ಒಬ್ಬೊಬ್ಬ ಶಾಸಕನಿಗೂ ಬಿಜೆಪಿಯವರು 50 ಕೋಟಿ ಆಫರ್ ಕೊಟ್ಟು, ಚುನಾವಣೆ ನಾವೇ ನೋಡಿಕೊಳ್ಳುತ್ತೇವೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಭ್ರಷ್ಟಾಚಾರದ ಪಿತಾಮಹರು. ಆಪರೇಷನ್ ಕಮಲ ಶುರು ಮಾಡಿದ ಮಹಾನುಭಾವರು. ಒಬ್ಬ ಎಂ.ಎಲ್.ಎ. ಗೆ 50 ಕೋಟಿ ಆಫರ್ ಕೊಟ್ಟು, ನಾವೇ ಎಲೆಕ್ಷನ್ ನೋಡಿಕೊಳ್ಳುತ್ತೇವೆ ಬನ್ನಿ ಎಂತಲೂ ಹೇಳ್ತಾರೆ. ಇದೆಲ್ಲಾ ಯಾವ ಹಣ, ಕಪ್ಪು ಹಣ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೋಲಿನ ಭೀತಿ ಶುರುವಾಗಿದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ. ಅವರ ಖಾತೆಯನ್ನು ಸಹ ಸೀಜ್ ಮಾಡಬೇಕಲ್ಲವೇ, ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೆ ಇದ್ದಾರೆಯೇ, ಬಿಜೆಪಿಯಲ್ಲಿ ಯಾರು ಇಲ್ಲವೇ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರು ಜನರ ಅಭಿಪ್ರಾಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಈ ಮಾದರಿಯಲ್ಲಿ ಮಾಡಿದರೇ ಒಪ್ಪೊಕೆ ಸಾಧ್ಯವಿಲ್ಲ. ಅವರಿಗೆ ಸೋಲುವ ಭೀತಿ ಎದುರಾಗಿದೆ. ಸೋಲಿನ ಭೀತಿಯಿಂದ ಪಕ್ಷದ ಖಾತೆಗಳನ್ನು ಸ್ಥಗಿತ ಮಾಡಿದ್ದಾರೆ. ಬಿಜೆಪಿಯವರಿಗೂ ಫಂಡ್ ಬಂದಿದೆ. ಅವರ ಖಾತೆಗಳನ್ನು ಸಹ ಸ್ಥಗಿತ ಮಾಡಬೇಕಲ್ಲವೇ. ಇಡಿ ಐಟಿ ವಿರೋಧ ಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ಮಾಡುತ್ತಿದೆ. ಸಿಎಎ, ರಾಮಮಂದಿರ ಎಷ್ಟು ಬಾರಿ ಹೇಳಲು ಸಾಧ್ಯ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದ ವೇಳೆ ಮತದಾರರು ತಕ್ಕ ಶಾಸ್ತಿ, ಪಾಠ ಕಲಿಸುತ್ತಾರೆ. ಈ ಭಾರಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.