ಮಗಳು ಪ್ರೀತಿಸಿದ ಯುವಕನ ಜೊತೆಗೆ ಮದುವೆಗೆ ಒಪ್ಪದ ತಂದೆ ಕಾಲೇಜು ಓದುತ್ತಿದ್ದ 17 ವರ್ಷದ ಮಗಳಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮಗಳು ಪ್ರೀತಿಸಿದ ಹುಡುಗನೇ ಬೇಕು ಎಂದು ಹಠ ಮಾಡಿದ್ದಾಳೆ. ಈ ಕಾರಣದಿಂದ 17 ವರ್ಷ ಸಾಕಿ ಸಲುಹಿದಂತಹ ತಂದೆಯೇ ತನ್ನ ಮಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಳಿಕ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆಯೇ ದೂರು ನೀಡಿದ್ದಾರೆ. ಈ ಘಟನೆ ನಡೆದು 7 ತಿಂಗಳಾದ ಬಳಿಕ ಸತ್ಯಾಂಶ ಹೊರಬಂದಿದ್ದು, ಇದೊಂದು ಮರ್ಯಾದಾ ಹತ್ಯೆ ಇರಬಹುದು ಎನ್ನಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಯುವತಿಯನ್ನು ಅರ್ಚಿತಾ (17) ಳನ್ನು ತನ್ನ ತಂದೆಯೇ ಕೊಲೆ ಮಾಡಿದ್ದಾರೆ. ಆರೋಪಿ ರವಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಈ ಕೊಲೆ ಮೇ.21 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ನೀನು ಪ್ರೀತಿಸುವ ಹುಡುಗ ಸಂಬಂಧದಲ್ಲಿ ಅಣ್ಣ ಆಗುತ್ತಾನೆ ಬೇಡ ಎಂದು ಮಗಳಿಗೆ ತಂದೆ ಬುದ್ದಿವಾದ ಹೇಳಿದ್ದರಂತೆ. ಆದರೂ ಸಹ ಆಕೆ ಅವನೊಂದಿಗೆ ಸಂಬಂಧ ಮುಂದುವರೆಸಿದ್ದಳಂತೆ. ಮಗಳು ಅಪ್ರಾಪ್ತರಾಗಿದ್ದಳು ಸಹ ಕಳೆದ ಮಾರ್ಚ್ ಮಾಹೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕವೂ ಸಹ ಅರ್ಚಿತಾ ಸರಿಯಾಗಿ ಗಂಡನೊಂದಿಗೆ ಸಂಸಾರ ಮಾಡದೇ ಗಲಾಟೆ ಮಾಡುತ್ತಿದ್ದಳಂತೆ. ಈ ಬಗ್ಗೆ ಅಳಿಯ ಬಂದು ಮಗಳ ವರ್ತನೆಯ ಬಗ್ಗೆ ತಂದೆ ರವಿ ಬಳಿ ದೂರು ನೀಡಿದ್ದನಂತೆ.
ಬಳಿಕ ರವಿ ತನ್ನ ಮಗಳಿಗೆ ಬುದ್ದಿವಾದ ಹೇಳುತ್ತೇನೆ ಎಂದು ತವರು ಮನೆಗೆ ಕರೆದುಕೊಂಡು ಬಂದಿದ್ದಾನೆ. ಎಷ್ಟೇ ಬುದ್ದಿ ಹೇಳಿದರೂ ಆಕೆ ಪ್ರೀತಿಸಿದವನೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದರಿಂದ ಆಕ್ರೋಷಗೊಂಡ ರವಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಗಳನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ಬೇರೆಯವರ ಜಮೀನಿನಲ್ಲಿ ಸುಟ್ಟು ಹಾಕಿದ್ದಾನೆ. ಬಳಿಕ ಆಕೆ ಕಾಣೆಯಾಗಿದ್ದಾಳೆ ಎಂದು ಅ.17 ರಂದು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಅಸಲೀ ಸತ್ಯ ತಿಳಿದಿದ್ದು, ಅರ್ಚಿತಾಳನ್ನು ಸುಟ್ಟಿರುವ ಸ್ಥಳದಲ್ಲಿ FSIL ತಂಡ ಅವಶೇಷಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗಿದೆ. ಆರೋಪಿ ತಂದೆಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.