ತನ್ನ ಮಗಳು ಅನ್ಯ ಜಾತಿ ಯುವಕನನ್ನು ಪ್ರೀತಿ ಮಾಡಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ಮಗಳನ್ನೆ ತಂದೆಯೊಬ್ಬ ಕತ್ತು ಕೊಯ್ಡು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರಿನ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಯುವತಿಯನ್ನು ಕವನ (20) ಎಂದು ಗುರ್ತಿಸಲಾಗಿದೆ. ಮಗಳನ್ನು ಕೊಲೆ ಮಾಡಿದ ತಂದೆ ಮಂಜುನಾಥ್ (47) ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ.
ದೇವನಹಳ್ಳಿಯ ಬಿದಲೂರಿನ ಗ್ರಾಮದ ನಿವಾಸಿ ಮಂಜುನಾಥ್ ಮಗಳು ಕವನ ಬೇರೆ ಯುವತಿಯನ್ನು ಪ್ರೀತಿ ಮಾಡುತ್ತಿದ್ದಾಳೆಂದು ಕೋಪಗೊಂಡ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ವಿಶ್ವನಾಥಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕವನ ಅದೇ ಗ್ರಾಮದ ಅನ್ಯ ಜಾತಿಯ ಯುವಕನನ್ನು ಕೆಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದಳಂತೆ. ಈ ವಿಚಾರ ಆಕೆಯ ತಂದೆಗೆ ತಿಳಿದಿದೆ. ಬಳಿಕ ಈ ವಿಚಾರವಾಗಿ ಮನೆಯಲ್ಲಿ ದೊಡ್ಡ ಗಲಾಟೆ ಸಹ ನಡೆದಿತ್ತಂತೆ. ಆರೋಪಿ ಮಂಜುನಾಥ್ ಎರಡು ಮೂರು ಬಾರಿ ಮಗಳಿಗೆ ಬುದ್ದಿ ಸಹ ಹೇಳಿದ್ದನಂತೆ. ತಂದೆಯ ಮಾತನ್ನು ಕೇಳದ ಕವನ ಆತನನ್ನು ಪ್ರೀತಿ ಮಾಡುತ್ತಿದ್ದಳಂತೆ. ಇದರಿಂದ ಕೋಪಗೊಂಡ ಮಂಜುನಾಥ್ ಮರ್ಯಾದೆಗೆ ಅಂಜಿ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೂ ಆರೋಪಿ ಮಂಜುನಾಥ್ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರೂ ಮಕ್ಕಳು ಪ್ರೀತಿಯ ಬಲೆಗೆ ಬಿದ್ದಿದ್ದರು ಎನ್ನಲಾಗಿದೆ. ಕಳೆದ ಮಂಗಳವಾರ ಕಿರಿಯ ಮಗಳು ಬೇರೊಬ್ಬ ಯುವಕನನ್ನು ಪ್ರೀತಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಆಕೆ ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇದರ ಬೆನ್ನಲ್ಲೆ ಮತ್ತೋರ್ವ ಮಗಳಾದ ಕವನ ಸಹ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರ ಮಂಜುನಾಥನಿಗೆ ತಿಳಿದಿದೆ. ಈ ಕಾರಣದಿಂದ ಮರ್ಯಾದೆಗೆ ಅಂಜಿ ತನ್ನ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಕೋಳಿ ಕೊಯ್ಯುವ ಚಾಕುವಿನಿಂದಲೇ ಮಗಳ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಎಸ್.ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.