ಕೇಂದ್ರ ಎನ್.ಡಿ.ಎ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿಎಎ ಅನುಷ್ಠಾನ ಘೋಷಣೆ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ-2024ರ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಕೇಂದ್ರ ಸರ್ಕಾರ ಸಿಎಎ ಜಾರಿಗೆ ಮಾಡಿದ್ದಾರೆ.
ಕಳೆದ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಿಎಎ ಜಾರಿಗೆ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಈ ಮಸೂದೆ 4 ವರ್ಷಗಳ ಹಿಂದೆಯೇ ಅಂಗೀಕಾರ ಆಗಿತ್ತು. ಇದೀಗ 4 ವರ್ಷಗಳ ಬಳಿಕ ಸಿಎಎ ಜಾರಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅದರಂತೆ 2014 ಡಿಸೆಂಬರ್ 31 ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದಂತಹ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಹಾಗೂ ಪಾರ್ಸಿ ಸಮುದಾಯಗಳಿಗೆ ಸೇರಿದಂತಹ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದ ನಾಗರೀಕರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ. ಈ ನಿಯಮಗಳನ್ನು ಕೇಂದ್ರ ಘೋಷಣೆ ಮಾಡಿದೆ.
ಇನ್ನೂ 4 ವರ್ಷಗಳ ಹಿಂದೆ ಸದನದಲ್ಲಿ ಈ ಕಾಯ್ದೆಯ ಜಾರಿಯ ನಿಮಿತ್ತ ತೀವ್ರ ಚರ್ಚೆ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ದೇಶದಾದ್ಯಂತ ತೀವ್ರವಾದ ಪ್ರತಿಭಟನೆಗಳೂ ಸಹ ನಡೆದಿತ್ತು. ವಿರೋಧ ಪಕ್ಷದ ರಾಜಕಾರಣಿಗಳು ಹಾಗೂ ಬಿಜೆಪಿಯೇತರ ರಾಜ್ಯಗಳ ಮುಖ್ಯಂತ್ರಿಗಳ ವಿರೋಧದ ನಡುವೆ ಸಂಸತ್ತಿನಲ್ಲಿ ಕಾಯ್ದೆ ಅಂಗೀಕಾರವಾಗಿತ್ತು. ಪಾಕಿಸ್ತಾನ, ಬಾಂಗ್ಲಾ ಹಾಗೂ ಆಫ್ಘಾನಿಸ್ತಾನದಲ್ಲಿ ಕಿರುಕುಳ ಎದುರಿಸಿ ನಂತರ ಭಾರತಕ್ಕೆ ಬಂದವರಿಗೆ ಪೌರತ್ವನನ್ನು ನೀಡುವುದು ಸಿಎಎ ಉದ್ದೇಶವಾಗಿದೆ. ಇದು ಭಾರತೀಯ ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆಯಲ್ಲ ಎಂದು ಅಮಿತ್ ಶಾ ಸ್ಪಷ್ಟನೆಯನ್ನು ನೀಡಿದ್ದರು.