ರಾಜ್ಯದಲ್ಲಿ ಫೈರ್ ಬ್ರಾಂಡ್ ರಾಜಕಾರಣಿ ಎಂದೇ ಕರೆಯಲಾಗುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಮಾತನಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆಗಾಗ ಸ್ವಪಕ್ಷೀಯರ ಬಗ್ಗೆಯೇ ಗುಡುಗುತ್ತಿರುತ್ತಾರೆ. ಇದೀಗ ಮಾಜಿ ಸಿಎಂ ಬಿ.ಎಸ್.ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರವರ ಬಗ್ಗೆ ಗುಡುಗಿದ್ದು, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ಅಪ್ಪ-ಮಗನ ಕೆಲಸ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಹಾಲಿ ಮೂವರು ಸದಸ್ಯರಿಗೆ ಈ ಬಾರಿ ಲೋಕಸಭಾ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೂಜ್ಯ ತಂದೆ-ಮಗ ಇಬ್ಬರೂ ಸೇರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ನನ್ನನ್ನು ಸಹ ಸೋಲಿಸಲು ಬಿ.ವೈ.ವಿಜಯೇಂದ್ರ ಹಣ ಕಳುಹಿಸಿದ್ದ. ಯಡಿಯೂರಪ್ಪ ಕುಟುಂಬದಲ್ಲಿ ಒಬ್ಬ ಮಗ ಕ್ಯಾಬಿನೆಟ್ ಮಂತ್ರಿಯಾಗಬೇಕು, ಮತ್ತೋರ್ವ ಮುಖ್ಯಮಂತ್ರಿಯಾಗಬೇಕು ಜೊತೆಗೆ ಅವರ ಮನೆಯ ಕೆಲವು ಸದಸ್ಯರು ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯರಾಗಬೇಕು. ಇದು ಯಡಿಯೂರಪ್ಪ ರವರ ಕೊನೆಯ ಬಯಕೆ ಎಂದು ಕುಟುಕಿದ್ದಾರೆ.
ಇನ್ನೂ ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ. ಯಡಿಯೂರಪ್ಪ ಲಿಂಗಾಯತನೇ ಅಲ್ಲ. ಅವರ ಹಿಂದೆ ಕೆಲ ಸ್ವಾಮೀಜಿಗಳಿದ್ದಾರೆ. ಆತ ಹಣ ಕೊಡ್ತಾನೆ ಅಂತಾ ಸ್ವಾಮೀಜಿ ತಥಾಸ್ತು ಅಂತಾರೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪ ಬಂಡವಾಳ ಮತಷ್ಟು ಬಯಲು ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಯಡಿಯೂರಪ್ಪ ರಾಜ್ಯದ ಮುಂದಿನ ಸಿಎಂ ನಾನೇ ಎಂದು ಸಹ ಹೇಳಿದ್ದರು.