ತಾನು ಪ್ರೀತಿಸಿದ ಮಾಜಿ ಪ್ರಿಯಕರನ ಕಾಟಕ್ಕೆ ಹೆದರಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದ್ದು, ಮೃತ ದುರ್ದೈವಿಯನ್ನು ಚಂದ್ರಕಲಾ(19) ಎಂದು ಗುರ್ತಿಸಲಾಗಿದೆ. ಈ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮಗಳ ಸಾವಿಗೆ ಅರುಣ್ ಕುಮಾರ್ ಎಂಬಾತನೆ ಕಾರಣ ಎಂದು ಮೃತಳ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಮೃತ ಚಂದ್ರಕಳಾ ಜಿಗಣಿ ಸಮೀಪದ ನಂಜಾಪುರ ಎಂಬ ಗ್ರಾಮದ ನಿವಾಸಿಯಾಗಿದ್ದರು. ಚಂದ್ರಕಲಾ ಹಾಗೂ ಆರೋಪಿ ಅರುಣ್ ಕುಮಾರ್ ಇಬ್ಬರೂ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರಂತೆ. ಈ ವಿಚಾರ ತಿಳಿದ ಯುವತಿ ಮನೆಯವರು ಆಕೆಗೆ ಬುದ್ದಿವಾದ ಹೇಳಿದ್ದರಂತೆ. ಆತನ ವ್ಯಕ್ತಿತ್ವ ಸರಿಯಿಲ್ಲ ಎಂದು ತಿಳಿ ಹೇಳುವ ಕೆಲಸ ಮಾಡಿದ್ದರಂತೆ. ಆರೋಪಿ ಅರುಣ್ ಕುಮಾರ್ ಸಹ ಪ್ರಕರಣವೊಂದರ ಕಾರಣದಿಂದ ಜೈಲಿಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಆರೋಪಿ ಅರುಣ್ ಕುಮಾರ್ ಸಹ ಮೃತಳ ಪಕ್ಕದ ಮನೆಯ ನಿವಾಸಿಯಾಗಿದ್ದಾನೆ. ಬಳಿಕ ಯುವತಿಯನ್ನು ಒಪ್ಪಿಸಿದ ಪೋಷಕರು ಆಕೆಗೆ ಬೇರೆ ಮದುವೆ ಮಾಡಲು ನಿರ್ಣಯಿಸಿದ್ದಾರೆ.
ಮೃತ ಚಂದ್ರಕಳಾ ಪೋಷಕರು ಆಕೆಗೆ ಬೇರೆ ಮದುವೆ ಮಾಡುವ ಉದ್ದೇಶದಿಂದ ಆಕೆಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಸಹ ಮಾಡಿದ್ದಾರೆ. ಆದರೆ ಈ ಸುದ್ದಿ ತಿಳಿದ ಆರೋಪಿ ಅರುಣ್ ಬೇರೆ ಮದುವೆಯಾದರೇ ಕೊಲೆ ಮಾಡುವುದಾಗಿ ಯುವತಿಗೆ ಬೆದರಿಕೆ ಸಹ ಹಾಕಿದ್ದ ಎಂಬುದು ಚಂದ್ರಕಳಾ ಪೋಷಕರ ಆರೋಪವಾಗಿದೆ. ಈ ಕಾರಣದಿಂದಲೇ ನಮ್ಮ ಮಗಳು ಹೆದರಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ಆರೋಪಿ ಅರುಣ್ ಕುಮಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.