Film News

ರಾಜ್ಯದಾದ್ಯಂತ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣ ಸಿನೆಮಾ ರೂಪದಲ್ಲಿ ಬರಲಿದೆಯಂತೆ…..!

ಕಳೆದ 2012 ರಲ್ಲಿ ಕರ್ನಾಟಕ ರಾಜ್ಯದಾಧ್ಯಂತ ಭಾರಿ ಸದ್ದು ಮಾಡಿದ ಪ್ರಕರಣಗಳಲ್ಲಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಪ್ರಕರಣ ಇದೀಗ ಸಿನೆಮಾ ರೂಪದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಸುಮಾರು 11 ವರ್ಷಗಳಿಂದ ಈ ಪ್ರಕರಣದಡಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಇದೀಗ ಈ ಬಗ್ಗೆ ಸಿನೆಮಾ ಒಂದು ಮಾಡಲಿದ್ದಾರಂತೆ. ಈ ಸಿನೆಮಾದ ಹೆಸರನ್ನು ಫಿಲಂ ಚೇಂಬರ್‍ ನಲ್ಲಿ ನೊಂದಾಯಿಸಲಾಗಿದೆ. ಶೀಘ್ರದಲ್ಲೇ ಸೌಜನ್ಯ ಪ್ರಕರಣದ ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇತ್ತೀಚಿಗಷ್ಟೆ ಈ ಪ್ರಕರಣದ ಆರೋಪಿ ಸಂತೋಷ್ ರಾವ್ ವಿರುದ್ದ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಕಾರಣ ಆತನನ್ನು ದೋಷ ಮುಕ್ತಗೊಳಿಸಿತ್ತು ಸಿಬಿಐ ಕೋರ್ಟ್. ಈ ತೀರ್ಪಿನ ಬಳಿಕ ಈ ಪ್ರಕರಣ ಮತ್ತೆ ಬುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲವೊಂದು ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಈ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸಿನೆಮಾ ಒಂದು ತೆರೆಗೆ ಬರಲಿದೆಯಂತೆ. ಸ್ಟೋರಿ ಆಫ್ ಸೌಜನ್ಯ ಎಂಬ ಹೆಸರನ್ನು ಕರ್ನಾಟಕ ಫಿಲಂ ಚೇಂಬರ್‍ ನಲ್ಲಿ ನೊಂದಣಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಸಿನೆಮಾವನ್ನು ನಿರ್ದೇಶಕ ಲವ ಎಂಬುವವರು ನಿರ್ದೇಶನ ಮಾಡಲಿದ್ದಾರಂತೆ. ಜಿಕೆ ವೆಂಚರ್ಸ್ ಎಂಬ ಸಂಸ್ಥೆ ಈ ಸಿನೆಮಾ ನಿರ್ಮಾಣ ಮಾಡಲಿದೆಯಂತೆ.

ಕಳೆದ 2012 ಜೂ 9 ರಂದು ಕಾಲೇಜು ಮುಗಿಸಿ ಮನೆಗೆ ಬರುತ್ತಿರುವ ವೇಳೆ ದಾರಿ ಮದ್ಯೆ ಕಾಡಿನಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಕಾಲೇಜಿನಿಂದ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಇನ್ನೂ ಸುಮಾರು ಸಮಯವಾದರೂ ಆಕೆ ಮನೆಗೆ ಹೋಗದ ಕಾರಣದಿಂದ ಆಕೆಯ ಮನೆಯವರು ಎಲ್ಲಾ ಕಡೆ ಹುಡುಕಾಡಿದರು. ಮರುದಿನ ಅದೇ ದಾರಿಯಲ್ಲಿ ತನಿಖೆ ನಡೆಸಿದಾಗ ಸೌಜನ್ಯ ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಎಂಬ ದೂರು ಸಹ ದಾಖಲಾಗಿತ್ತು. ಬಳಿಕ ಈ ಘಟನೆಯ ವಿರುದ್ದ ರಾಜ್ಯದಾದ್ಯಂತ ಭಾರಿ ಪ್ರತಿಭಟನೆಗಳೂ ಸಹ ನಡೆದವು.

ಇನ್ನೂ ಪ್ರತಿಭಟನೆಗಳು ತೀವ್ರಗೊಂಡ ಕೆಲವು ದಿನಗಳ ಬಳಿಕ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಈ ಬಂಧನದ ಬಗ್ಗೆ ಸಹ ಅನೇಕ ಅನುಮಾನಗಳು ವ್ಯಕ್ತವಾದವು. ಬಳಿಕ ಈ ಪ್ರಕರಣ ಸಿಐಡಿ ತನಿಖೆಗೆ ವರ್ಗಾಯಿಸಲಾಯಿತು. ಸಿಬಿಐ ನ್ಯಾಯಲಯಕ್ಕೆ 2016 ರಲ್ಲಿ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿತ್ತು ಆದರೆ ಆರೋಪ ಪಟ್ಟಿಯಲ್ಲಿ ಆರೋಪಿಯ ಮೇಲಿರುವ ಆರೋಪದ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲಲ್ಲ.  ಬಳಿಕ 2018 ರಲ್ಲಿ ಮತ್ತೊಮ್ಮೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ವಿಚಾರಣೆಯ ವೇಳೆಯಲ್ಲೂ ಸಹ ಸಿಬಿಐ ಪರ ವಕೀಲರು ಆರೋಪ ಸಾಬೀತು ಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಎಂಬಾತನನ್ನು ಆರೋಪಮುಕ್ತಗೊಳಿಸಿದೆ.

Most Popular

To Top