ಭಾರತದ ಕೋಟ್ಯಂತರ ಹಿಂದೂ ಗಳ ಕನಸಾಗಿದ್ದ ರಾಮಮಂದಿರ ಲೋಕಾರ್ಪಣೆಗೊಂಡು ತಿಂಗಳು ಕಳೆಯುತ್ತಾ ಬಂದಿದೆ. 500 ವರ್ಷಗಳಿಂದ ಹಿಂದೂಗಳ ಬೇಡಿಕೆಯಾಗಿದ್ದ ರಾಮಮಂದಿರ ಕಳೆದ ಜ.22 ರಂದು ಲೋಕಾರ್ಪಣೆ ಗೊಂಡಿದೆ. ಜ.23 ರಂದು ಪ್ರಾಣ ಪ್ರತಿಷ್ಟೆಗೊಂಡ ಬಾಲರಾಮನ ದರ್ಶನ ಸಾಮಾನ್ಯ ಭಕ್ತರಿಗೂ ಸಹ ಅವಕಾಶ ಕಲ್ಪಿಸಲಾಗಿದೆ.
ಬಾಲರಾಮನ ದರ್ಶನ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಇದೀಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಒಂದು ತಿಂಗಳಲ್ಲಿ ರಾಮನ ದರ್ಶನ ಪಡೆದ ಭಕ್ತರ ಸಂಖ್ಯೆ ಹಾಗೂ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಿದೆ. ಒಂದು ತಿಂಗಳಲ್ಲಿ ರಾಮನ ದರ್ಶನವನ್ನು ಪಡೆದ ಭಕ್ತರ ಸಂಖ್ಯೆ ಸುಮಾರು 60 ಲಕ್ಷ ಎಂದು ಹೇಳಲಾಗಿದೆ. ಜೊತೆಗೆ ರಾಮಮಂದಿರಕ್ಕೆ ಬರೊಬ್ಬರಿ 25 ಕೋಟಿಯಷ್ಟು ದೇಣಿಗೆ ಬಂದಿದೆ. ಈ ಪೈಕಿ 25 ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣಗಳೂ ಪತ್ತೆಯಾಗಿದೆ. ಆನ್ ಲೈನ್ ಮೂಲಕ ಸಹ ಕೆಲ ಭಕ್ತರು ದೇಣಿಗೆ ನೀಡಿದ್ದು, ಅದರ ಲೆಕ್ಕಾಚಾರ ಇನ್ನೂ ಖಚಿತವಾಗಿಲ್ಲ. ರಾಮನ ಹುಂಡಿಯಲ್ಲಿ ನಗದು ಕಾಣಿಕೆ ಜೊತೆಗೆ ಚೆಕ್ ಹಾಗೂ ಡ್ರಾಫ್ಟ್ ಗಳ ರೂಪದಲ್ಲಿ ಸಹ ದೇಣಿಗೆ ನೀಡಿದ್ದಾರೆ ಎಂದು ಟ್ರಸ್ಟ್ ನ ಅಧಿಕಾರಿ ಪ್ರಕಾಶ್ ಗುಪ್ತ ಎಂಬುವವರು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಭಕ್ತರಿಂದ ಕಾಣಿಕೆಯಾಗಿ ಬಂದಿರುವ ಚಿನ್ನ, ಬೆಳ್ಳಿ ಆಭರಣಗಳನ್ನು ಕರಗಿಸುವುದು, ಎಣಿಸುವುದು ಸೇರಿದಂತೆ ಇನ್ನಿತರೆ ಜವಾಬ್ದಾರಿಗಳನ್ನು ಮಿಂಟ್ ಆಫ್ ಇಂಡಿಯಾಗೆ ವಹಿಸಲಾಗಿದೆ. ಕೆಲವೇ ದಿನಗಳಲ್ಲಿ ಶ್ರೀರಾಮನವಮಿ ಹಬ್ಬ ಸಹ ಬರಲಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ಬಳಿಕ ಮೊದಲ ರಾಮನವಮಿ ಇದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಡಿಕೊಳ್ಳುತ್ತಿದೆ ಎಂದು ಮತ್ತೋರ್ವ ಟ್ರಸ್ಟಿ ಅನೀಲ್ ಮಿಶ್ರಾ ತಿಳಿಸಿದ್ದಾರೆ.