News

ಈಶ್ವರಪ್ಪನವರು ಡಮ್ಮಿ ಕ್ಯಾಂಡಿಯೇಟ್, ಗೀತಕ್ಕ ಅಲ್ಲ ಎಂದು ಲೇವಡಿ ಮಾಡಿದ ಸಚಿವ ಮಧು ಬಂಗಾರಪ್ಪ…..!

ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗ ಕ್ಷೇತ್ರ ಸಹ ಭಾರಿ ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಲ್ಲಿ ಈ ಭಾರಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರ ಪತ್ನಿ ಗೀತಾ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪ ರವರು ಸಹ ಬಿಜೆಪಿ ಪಕ್ಷದ ಮೇಲಿನ ಮುನಿಸಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ಸಚಿವ ಮಧು ಬಂಗಾರಪ್ಪ ಈಶ್ವರಪ್ಪರವರು ಡಮ್ಮಿ ಕ್ಯಾಂಡಿಯೇಟ್ ಎಂದು ಲೇವಡಿ ಮಾಡಿದ್ದಾರೆ.

ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿಗಷ್ಟೆ ಈಶ್ವರಪ್ಪ ರವರು ಶಿವಮೊಗ್ಗ  ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‍ ರವರು ಡಮ್ಮಿ ಎಂದು ಕರೆದಿದ್ದರು. ಈ ಕುರಿತು ಮಧುಬಂಗಾರಪ್ಪ ಮಾತನಾಡಿ, ಈಶ್ವರಪ್ಪನವರು ಡಬ್ಬ, ಬರಿ ಸೌಂಡ್ ಮಾಡುತ್ತೆ ಅಷ್ಟೇ ಎಂದಿದ್ದಾರೆ. ಈಶ್ವರಪ್ಪ ತಮ್ಮ ಪಕ್ಷದ ವಿರುದ್ದವೇ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೇಸ್ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿಯನ್ನು ಯಾರು ನಾಶ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಸದಾನಂದಗೌಡರು, ಯತ್ನಾಳ್ ಹಾಗೂ ಈಶ್ವರಪ್ಪನವರೇ ಹೇಳುತ್ತಿದ್ದಾರೆ. ಈಶ್ವರಪ್ಪನವರಿಗೆ ಹಿಂದುಳಿದ ವರ್ಗಗಳ ಮತಗಳನ್ನು ಚದುರಿಸುವಂತೆ ಪೊಲಿಟಿಕಲ್ ಸುಪಾರಿಯನ್ನು ಯಡಿಯೂರಪ್ಪ ಕೊಟ್ಟಿರಬಹುದು ಎಂಬುದು ನನ್ನ ಭಾವನೆಯಾಗಿದೆ. ಇವರೆಲ್ಲಾ ಜಾತಿ ಮೇಲೆ ರಾಜಕಾರಣ ಮಾಡಿ ರಾಷ್ಟ್ರ-ರಾಜ್ಯವನ್ನು ಹೊಲಸು ಮಾಡುತ್ತಾರೆ ಎಂದು ಗುಡುಗಿದರು.

ಕಾಂಗ್ರೇಸ್ ಪಕ್ಷ ಸದಾ ಜನರ ವಿಶ್ವಾಸ ತೆಗೆದುಕೊಂಡು ರಾಜಕಾರಣ ಮಾಡುತ್ತದೆ ವಿನಃ ಜಾತಿ ಧರ್ಮದ ಮೇಲೆ ಅಲ್ಲ. ಎಲ್ಲಾ ಜಾತಿ ಹಾಗೂ ಧರ್ಮದವರನ್ನು ಪ್ರೀತಿ ವಿಶ್ವಾಸದಿಂದ ನೋಡುತ್ತೇವೆ. ಮಗನಿಗೆ ಟಿಕೆಟ್ ಕೊಡಿಸಲಾಗದ ಈಶ್ವರಪ್ಪ ತಮ್ಮ ಗಂಡಸ್ತನದ ಬಗ್ಗೆ ಯೋಚನೆ ಮಾಡಲಿ. ಗೀತಾ ರವರು ಅವರದ್ದೇ ಆದ ಸಾಧನೆ ಮಾಡಿದ್ದಾರೆ. ಈಶ್ವರಪ್ಪನವರಿಗೆ ಗೀತಾ ರವರ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ. ನಮ್ಮ ತಂಟೆಗೆ ಬಂದರೇ ಮತದಾರರೇ ತಕ್ಕ ಉತ್ತರ ಕೊಡಲಿದ್ದಾರೆ. ನಿಮ್ಮ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾತನಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

Most Popular

To Top