ಕಳೆದೆರಡು ದಿನಗಳಿಂದ ಬೆಂಗಳೂರಿನ ಬೊಮ್ಮನಹಳ್ಳಿ ಕೂಡ್ಲುಗೇಟ್ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರು ಭಯದಿಂದ ಬದುಕುತ್ತಿದ್ದರು. ನಿನ್ನೆಯಷ್ಟೆ ಅರಣ್ಯಾಧಿಕಾರಿಗಳು ಹಾಕಿದ್ದ ಬಲೆಗೆ ಚಿರತೆ ಬಿದ್ದಿದೆ. ಈ ಸಮಯದಲ್ಲಿ ಚಿರತೆಗೆ ಗುಂಡೇಟು ಬಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿದ್ದ ಬಗ್ಗೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೂರು ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹ ಚಿರತೆಯನ್ನು ಹಿಡಿಯಲು ಭಾರಿ ಪ್ಲಾನ್ ಹಾಕಿದ್ದರು. ಚಿರತೆ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿಯಿರುವ ಪಾಳು ಬಿದ್ದ ಕಟ್ಟಡದಲ್ಲಿ ಕಂಡುಬಂದಿತ್ತು. ಈ ಆಧಾರದ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯಲು ಬಲೆ ಬೀಸಿದ್ದರು. ಆದರೆ ಪೊದೆಯಿಂದ ಚಿರತೆ ಹೊರಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚಿರತೆಗೆ ಗುಂಡು ಹಾರಿಸಲಾಯಿತು. ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ಸಹ ನೀಡಲಾಗಿತ್ತು ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇನ್ನೂ ಚಿರತೆಯನ್ನು ಹಿಡಿಯುವ ಸಮಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಓರ್ವ ವೈದ್ಯ ಹಾಗೂ ಸಿಬ್ಬಂದಿಗೆ ಗಂಭೀರ ಗಾಯ ಸಹ ಆಗಿತ್ತು. ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಗುಂಡು ಹಾರಿಸಲು ಅನುಮತಿ ಕೋರಲಾಗಿತ್ತು. ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ ಬಳಿಕವೂ ಸಹ ಸಿಬ್ಬಂದಿ ಮೇಲೆ ಧಾಳಿಗೆ ಯತ್ನ ನಡೆಸಿತ್ತು. ಈ ಸಮಯದಲ್ಲಿ ಆತ್ಮರಕ್ಷಣೆಗಾಗಿ ಗುಂಡೇಟು ಹೊಡೆಯಲಾಗಿದೆ. ಬಳಿಕ ಬನ್ನೇರುಘಟ್ಟ ಉದ್ಯಾನವನಕ್ಕೆ ಚಿರತೆಗೆ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.