ಸೌತ್ ಸಿನಿರಂಗದ ವಿಲಕ್ಷಣ ನಟ ಪ್ರಕಾಶ್ ರಾಜ್ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿರುತ್ತಾರೆ. ಅವರು ಮಾಡುವಂತಹ ಟ್ವೀಟ್ ಗಳು ಅನೇಕ ಚರ್ಚೆಗಳು ವಿವಾದಕ್ಕೆ ಗುರಿಯಾಗುತ್ತಿರುತ್ತದೆ. ಇದೀಗ ನೂರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ರವರಿಗೆ ಇಡಿ ಸಮನ್ಸ್ ನೀಡಿದೆ. ಚಿನ್ನಾಭರಣ ವ್ಯಾಪಾರ ಮಳಿಗೆ ಪ್ರಣವ್ ಜ್ಯುವೆಲ್ಲರಿಯ ಚೈನ್ ಲಿಂಕ್ ಆಧಾರಿತ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪ್ರಕಾಶ್ ರಾಜ್ ಗೆ ಶಾಕ್ ನೀಡಿದೆ.
ಚೆನೈ, ಪುದುಚೆರಿ ಸೇರಿದಂತೆ ತಮಿಳುನಾಡಿನಲ್ಲಿ ಅನೇಕ ಶಾಖೆಗಳನ್ನು ಹೊಂದಿರುವ ಪ್ರಣವ್ ಜ್ಯುವೆಲ್ಲರಿ ಬ್ಯಾಂಡ್ ಗೆ ನಟ ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಪ್ರಣವ್ ಜ್ಯುವೆಲ್ಲರಿ ಮಳಿಗೆಯ ಮೂಲಕ ಚೈನ್ ಲಿಂಕ್ ಆಧಾರದಲ್ಲಿ ಚಿನ್ನದ ಮೇಲೆ ಗ್ರಾಹಕರಿಂದ ಹೂಡಿಕೆ ಮಾಡಿಸಿದ್ದು, ಈ ಮೂಲಕ ಹೂಡಿಕೆದಾರರಿಗೆ ನೂರು ಕೋಟಿ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಣವ್ ಜ್ಯುವೆಲ್ಲರಿಯ ಕೆಲ ಶಾಖೆಗಳಲ್ಲಿ ದಾಳಿ ನಡೆಸಿದ್ದರು. ಹೂಡಿಕೆದಾರರಿಂದ ಕೆಲವೊಂದು ದೂರುಗಳು ಬಂದಿದ್ದು, ಅದನ್ನು ಆಧರಿಸಿದ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಕಳೆದ ಅಕ್ಟೋಬರ್ ಮಾಹೆಯಲ್ಲಿ ಈ ದಾಳಿ ನಡೆದಿತ್ತು. ಇನ್ನೂ ಪ್ರಣವ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಕಾಶ್ ರಾಜ್ ಈ ಹೂಡಿಕೆಯ ಬಗ್ಗೆ ಪ್ರಚಾರ ನಡೆಸಿದ್ದರು.
ಇದೀಗ ಹೂಡಿಕೆದಾರರು ವಂಚನೆಯ ಬಗ್ಗೆ ದೂರು ನೀಡಿದ್ದಾರೆ. ಇಡಿ ಸಹ ದಾಳಿ ನಡೆಸಿದೆ. ಆದರೆ ಈ ಕುರಿತು ನಟ ಪ್ರಕಾಶ್ ರಾಜ್ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಇಡಿ ಅಧಿಕಾರಿಗಳು ಪ್ರಕಾಶ್ ರಾಜ್ ಗೂ ಸಹ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ಇನ್ನೂ ಕಳೆದ ಅಕ್ಟೋಬರ್ ಮಾಹೆಯಲ್ಲಿ ಪ್ರಣವ್ ಜ್ಯುವೆಲ್ಲರಿಯ ಮಾಲೀಕ ಮದನ್ ಹಾಗೂ ಆತನ ಪತ್ನಿ ವಿರುದ್ದ ಲುಕೌಟ್ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಹೂಡಿಕೆ ನೆಪದಲ್ಲಿ ನೂರು ಕೋಟಿ ಸಂಗ್ರಹಿಸಿದ್ದು, ಈ ಮೊತ್ತವನ್ನು ಹೂಡಿಕೆದಾರರಿಗೆ ಪ್ರಣವ್ ಜ್ಯುವೆಲ್ಲರಿ ವಾಪಸ್ಸು ನೀಡಿಲ್ಲ. ಈ ಸಂಬಂಧ ಅನೇಕ ಬಾರಿ ಹೂಡಿಕೆದಾರರು ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿದೆ. ಜನರು ಹೂಡಿಕೆ ಮಾಡಿದ ಹಣವನ್ನು ಪ್ರಣವ್ ಜ್ಯುವೆಲ್ಲರಿ ಹಣವನ್ನು ನೀಡದೇ ವಂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.