ದೇಶದಲ್ಲಿ ಕಳೆದೆರಡು ದಿನಗಳಿಂದ ಸನಾತನ ಧರ್ಮದ ಬಗ್ಗೆ ಕೆಲ ಪಕ್ಷಗಳ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಸಿಎಂ ಸ್ಟಾಲಿನ್ ರವರ ಪುತ್ರ ಉದಯನಿಧಿ ಸನಾತನ ಧರ್ಮ ಡೆಂಘಿ, ಕೊರೋನಾ, ಮಲೇರಿಯಾ ರೋಗಗಳಿಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಇದೀಗ ಇಂಡಿಯಾ (I.N.D.I.A) ಒಕ್ಕೂಟದ ಡಿಎಂಕೆ ನಾಯಕ ಎ.ರಾಜಾ ಸಹ ಸನಾತನ ಧರ್ಮವನ್ನು ಏಡ್ಸ್, ಕುಷ್ಟರೋಗದಂತೆ ಸಾಮಾಜಿಕ ರೋಗ ಎಂದು ಸನಾತನ ಧರ್ಮ ಹೆಚ್.ಐ.ವಿ ಗಿಂತ ಅಪಾಯಕಾರಿ ಕಾಯಿಲೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದು, ದೇಶದಾದ್ಯಂತ ಭಾರಿ ಟೀಕೆಗೆ ಗುರಿಯಾಗುತ್ತಿದೆ.
ಇನ್ನೂ ಗುರುವಾರ (ಸೆ.07) ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಾಯಕ ಎ.ರಾಜಾ ಸನಾತನ ಧರ್ಮ ಮತ್ತು ವಿಶ್ವಕರ್ಮ ಯೋಜನೆ ಪ್ರತ್ಯೇಕವಲ್ಲ. ಎರಡು ಒಂದೇಯಾಗಿದೆ. ಮಲೇರಿಯಾ ಹಾಗು ಡೆಂಗೆಯಂತೆ ಓಡಿಸಬೇಕು ಎಂದು ಉದಯನಿಧಿ ಸ್ಟಾಲಿನ್ ಮೃದುವಾಗಿ ಹೇಳಿದ್ದಾರೆ. ಆದರೆ ವಾಸ್ತವವಾಗಿ ಸನಾತನ ಧರ್ಮ ಹೆಚ್.ಐ.ವಿ ಹಾಗೂ ಕುಷ್ಟ ರೋಗವಿದ್ದಂತೆ. ಆ ರೋಗಗಳಿಗೆ ಸಾಮಾಜಿಕ ಕಳಂಕವಿಲ್ಲ. ಆದರೂ ಅವೆರೆಡನ್ನೂ ಕೀಳಾಗಿ ಕಾಣಲಾಗುತ್ತದೆ. ಸನಾತನ ಧರ್ಮ ಅದಕ್ಕಿಂತ ಮಿಗಿಲಾದುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನನ್ನ ಅಭಿಪ್ರಾಯಗಳ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆ ಮಾಡಲು ಸಿದ್ದ. ನನ್ನ ತಲೆ ಮೇಲೆ ಹತ್ತಲ್ಲ ಒಂದು ಕೋಟಿ ಆಫರ್ ಇಟ್ಟರೂ ನಾನು ಹೆದರೊಲ್ಲ. ಶಸ್ತ್ರಗಳೊಂದಿಗೆ ಬಂದರೂ ನಾನು ಅಂಬೇಡ್ಕರ್ ಹಾಗೂ ಪೆರಿಯಾರ್ ರವರ ಪುಸ್ತಕಗಳೊಂದಿಗೆ ದೆಹಲಿಗೆ ಬರುತ್ತೇನೆ ಎಂದು ಎ.ರಾಜಾ ಹೇಳಿದ್ದಾರೆ.
ಜೊತೆಗೆ ನನಗೆ ಮೋದಿ ಜೊತೆಗೆ ಸಭೆ ಕರೆದರೇ ಅವರು ಅನುಮತಿ ನೀಡಿದರೇ ನಾನು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ಸನಾತನ ಧರ್ಮ ಯಾವುದು ಎಂಬ ಬಗ್ಗೆ ಉತ್ತ ನೀಡಲು ಸಹ ಸಿದ್ದವಿದ್ದೇನೆ. ನೀವು ಸನಾತನ ಧರ್ಮ ಯಾವುದು ಎಂದು ನಿರ್ಧರಿಸಿದ ಬಳಿಕ ನಾನು ವಿವರಣೆ ನೀಡುತ್ತೇನೆ ಎಂದು ಎ.ರಾಜಾ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೀಗ ಎ.ರಾಜಾ ನೀಡಿದ ಹೇಳಿಕೆಗಳು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಸನಾತನ ಧರ್ಮದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ.