ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸದಾ ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಜ್ಞಾನವಾಪಿ ಮಸೀದಿಯ ಕುರಿತು ಮಾತನಾಡಿದ್ದು, ಆತನ ಹೇಳಿಕೆಗಳು ಚರ್ಚೆಗೆ ಕಾರಣವಾಗಿದೆ. ಇನ್ನು ಯಾವುದೇ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡುವಂತಹ ಪ್ರಶ್ನೆಯೇ ಇಲ್ಲ ಎಂದು ಓವೈಸಿ ತಿಳಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ನೀಡಿದ ಅನುಮತಿಯಂತೆ ಪೂಜೆ ಸಹ ನಡೆಯುತ್ತಿದೆ. ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಎ.ಎಸ್.ಐ ನಡೆಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಭವನದಡಿಯಲ್ಲಿ ಉತ್ಖನನ ನಡೆಸಿದರೇ ಅಲ್ಲೂ ಏನಾದರೂ ಕುರುಹು ಪತ್ತೆಯಾಗಬಹುದು. ಶತಮಾನಗಳಿಂದ ಜ್ಞಾನವಾಪಿ ಸ್ಥಳದಲ್ಲಿ ನಾವು ಪ್ರಾರ್ಥನೆ ಮಾಡುತ್ತಿದ್ದೇವೆ. ಆದ್ದರಿಂದ ಬಾಬರಿ ಮಸೀದಿಯಂತೆ ಜ್ಞಾನವಾಪಿ ಮಸೀದಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಬರಲ್ಲ ಎಂದು ಓವೈಸಿ ಹೇಳಿದ್ದಾರೆ.
ಇನ್ನೂ ಬಾಬಸಿ ಮಸೀದಿ ಹಾಗೂ ಜ್ಞಾನವಾಪಿ ಮಸೀದಿ ಪ್ರಕರಣಗಳೆರಡಲ್ಲಿ ಹೋಲಿಕೆಯಿಲ್ಲ. ಈ ಎರಡೂ ಪ್ರಕರಣಗಳು ವಿಭಿನ್ನವಾದುದಾಗಿದೆ. ಬಾಬರಿ ಮಸೀದಿಯಲ್ಲಿ ಮುಸ್ಲೀಂರು ನಮಾಜ್ ಮಾಡುತ್ತಿರಲಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿತ್ತು. ಅದೇ ಜಾಗದಲ್ಲಿ ಈಗ ಮಸೀದಿ ನಿರ್ಮಾಣವಾಗಿದೆ. ಆದರೆ ನಾವು ಜ್ಞಾನವಾಪಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದೇವೆ. ನಾವು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ನಿರಂತರವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. 1993 ರಿಂದ ಜ್ಞಾನವಾಪಿಯಲ್ಲಿ ಹಿಂದೂಗಳು ಪೂಜೆ ನಡೆಸುತ್ತಿಲ್ಲ ಎಂದು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಓವೈಸಿ ವಾದಿಸಿದ್ದಾರೆ ಎಂದು ತಿಳಿದುಬಂದಿದೆ.