ತಿರುಮಲದಲ್ಲಿ ಡಿ.23 ರಿಂದ ಜ.1 ರವರೆಗೆ 10 ದಿನಗಳ ಕಾಲ ವೈಕುಂಠ ದ್ವಾರ ತೆರೆದಿರುತ್ತದೆ. ವೈಕುಂಠ ಏಕಾದಶಿಯ ಅಂಗವಾಗಿ ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿಕೊಡಲಾಗುತ್ತದೆ. ಉತ್ತರ ದ್ವಾರ ದರ್ಶನಕ್ಕೆ ಟಿಟಿಡಿ ಅಧಿಕಾರಿಗಳು ಭಕ್ತರಿಗೆ ಅನುಕೂಲವಾಗಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಡಿ.23 ರಂದು ಮುಂಜಾನೆ 1.45 ರಿಂದ ವೈಕುಂಠ ದ್ವಾರ ದರ್ಶನ ಆರಂಭವಾಗಲಿದೆ, ಜನವರಿ 1 ರಂದು ಮದ್ಯರಾತ್ರಿ 12 ಗಂಟೆಯವರಿಗೆ ವೈಕುಂಠ ದ್ವಾರ ದರ್ಶನವನ್ನು ಭಕ್ತರು ಪಡೆದುಕೊಳ್ಳಬಹುದಾಗಿದೆ. ಭಕ್ತರಿಗೆ ಅನುಕೂಲವಾಗಲು 4.25 ಲಕ್ಷ ಸರ್ವದರ್ಶನ ಟೋಕನ್ ಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸರ್ವದರ್ಶನ ಟೋಕನ್ ಗಳನ್ನು ಡಿ.22 ರಂದು ಮದ್ಯಾಹ್ನ 2 ರಿಂದ ತಿರುಪತಿಯ 9 ಕೇಂದ್ರಗಳಲ್ಲಿ 90 ಕೌಂಟರ್ ಗಳ ಮೂಲಕ ನೀಡಲಾಗಿದೆ. ಸಾರ್ವಜನಿಕ ಪ್ರವೇಶ ಟೋಕನ್ ಗಳನ್ನು ವಿಷ್ಣು ನಿವಾಸ, ಶ್ರೀನಿವಾಸಂ, ಗೋವಿಂದರಾಜಸ್ವಾಮಿ ಸತ್ರಗಳು, ಭೂದೇವಿ ಕಾಂಪ್ಲೇಕ್ಸ್, ಇಂದಿರಾ ಮೈದಾನ, ರಾಮಚಂದ್ರ ಪುಷ್ಕರಿಣಿ, ಬೈರಾಗಿ ಪಟ್ಟೇಡ ರಾಮನಾಯ್ಡು ಪ್ರೌಢಶಾಲೆ, ಜೀವಕೋಣ ಪ್ರೌಢಶಾಲೆ, ಎಂ.ಆರ್. ಪಲ್ಲಿ zp ಪ್ರೌಢಶಾಲೆಯಲ್ಲಿ ನೀಡಲಾಗಿದೆ. ದರ್ಶನ ಟೋಕನ್ ಹೊಂದಿರುವಂತಹ ಭಕ್ತರಿಗೆ ಮಾತ್ರ ತಿರುಮಲದಲ್ಲಿ ಕೊಠಡಿಗಳನ್ನು ನಿಗಧಿಪಡಿಸಲಾಗಿದೆ. ಭಕ್ತರ ದಟ್ಟಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಠಡಿಗಳನ್ನು ಪಡೆದುಕೊಳ್ಳಿ ಎಂದು ಅಧಿಕಾರಿಗಳು ಭಕ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಇನ್ನೂ ವೈಕುಂಠ ದ್ವಾರ ದರ್ಶನ ಹಿನ್ನೆಲೆಯಲ್ಲಿ ತಿರುಮಲಕ್ಕೆ ಅಪಾರ ಸಂಖ್ಯೆಯ ಭಕ್ತರ ದಂಡು ತೆರಳಿದೆ. ಟಿಕೆಟ್ ಇಲ್ಲದೇ ಸರ್ವದರ್ಶನಕ್ಕೆ ಬರುವ ಭಕ್ತರಿಗೆ ಸಾಲಿನಲ್ಲಿ ಹೋಗಲು ಅವಕಾಶ ಸಹ ನೀಡುತ್ತಿಲ್ಲ. ಟೋಕನ್ ಇರುವವರಿಗೆ ಸಮಸ್ಯೆಯಾಗಬಾರದೆಂದು ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೂ ವೈಕುಂಠ ದ್ವಾರದ ಮೂಲಕ ದರ್ಶನ ಪಡೆಯಲು ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ನ ಐದು ಮಂದಿ ನ್ಯಾಯಾಧೀಶರು, ಹೈಕೋರ್ಟ್ಗಳಿಂದ 35 ನ್ಯಾಯಾಧೀಶರು, 12 ಮಂದಿ ಸಚಿವರು, ಸ್ಪೀಕರ್ ಸಹ ತಿರುಮಲಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ದರ್ಶನ ಮತಷ್ಟು ವಿಳಂಭ ಆಗಬಹುದು ಎಂದು ಹೇಳಲಾಗುತ್ತಿದೆ.