ಚಿಕ್ಕಬಳ್ಳಾಪುರ ಹೊರವಲಯದ ಚಿತ್ರಾವತಿ ಬಳಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 44 ರ ಬಳಿ ನಿಂತಿದ್ದ ಸೀಮೆಂಟ್ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಸುಮೋ ವಾಹನದಲ್ಲಿದ್ದ 12 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಗಾಯಳುಗಳನ್ನು ರವಾನಿಸಲಾಗಿದೆ.
ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ಚಿತ್ರಾವತಿ ಬಳಿ ಸೀಮೆಂಟ್ ಲಾರಿ ನಿಂತಿದೆ. ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳಲು ಸುಮೋ ವಾಹನದಲ್ಲಿ 15 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮುಂಜಾನೆ ದಟ್ಟವಾದ ಮಂಜು ಕವಿದ ಕಾರಣದಿಂದ ಅಪಘಾತ ನಡೆದಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಈ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, ಮೃತರೆಲ್ಲರೂ ಆಂಧ್ರ ಪ್ರದೇಶದ ಮೂಲದವರು ಎನ್ನಲಾಗಿದೆ. ಉಳಿದ ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್.ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರ, ಟಾಟಾ ಸುಮೋ ಹಾಗೂ ಸೀಮೆಂಟ್ ಲಾರಿ ನಡುವೆ ನಡೆದ ದುರಂತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಮೃತರ ಮೂಲ ಎಲ್ಲಿ ಎಂಬುದನ್ನು ಸಹ ಪತ್ತೆ ಹಚ್ಚಲಾಗುತ್ತಿದೆ. ದಟ್ಟವಾದ ಮಂಜಿದ್ದ ಕಾರಣ ಅಪಘಾತ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.