ರಮಾನಂದ ಸಾಗರ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ ಧಾರಾವಾಹಿ 33 ವರ್ಷಗಳ ಬಳಿಕ ದೂರದರ್ಶನ ನ್ಯಾಶನಲ್ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿದೆ. 1987ರಲ್ಲಿ ಪ್ರಸಾರವಾದ ಈ ಪೌರಾಣಿಕ ಧಾರಾವಾಹಿ ಈಗಲೂ ಮನೆಮನೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು ಇದರ ಜನಪ್ರಿಯತೆ ಎಳ್ಳಷ್ಟೂ ಕಡಿಮೆಯಾಗಿಲ್ಲ.
ಈ ಧಾರಾವಾಹಿಯಲ್ಲಿ ಪ್ರಚಂಡ ರಾವಣನಾಗಿ ನಟ ಭಯಂಕರನಾಗಿ ಅಬ್ಬರಿಸಿರುವ ಕಲಾವಿದ ಅರವಿಂದ್ ತ್ರಿವೇದಿ. ಈಗವರಿಗೆ ಸರಿಸುಮಾರು 83 ವರ್ಷ. ಈ ಇಳಿ ವಯಸ್ಸಿನಲ್ಲಿ ಟಿವಿ ಮುಂದೆ ಕುಳಿತು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ನೋಡುಗರು ಥ್ರಿಲ್ ಆಗಿದ್ದಾರೆ.
ರಾಮಾಯಣ ಧಾರಾವಾಹಿ ಮರುಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಅವರೂ ಟಿವಿ ಮುಂದೆ ಕುಳಿತು ಅದರಲ್ಲೂ ಮುಖ್ಯವಾಗಿ ಸೀತಾಪಹರಣ ಸನ್ನಿವೇಶವನ್ನು ತದೇಕಚಿತ್ತದಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೀತಾಪಹರಣ ಸನ್ನಿವೇಶದ ಬಳಿಕ ತಮ್ಮ ಎರಡೂ ಕೈಗಳನ್ನು ಜೋಡಿಸಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಈ ಸನ್ನಿವೇಶ ಅವರನ್ನು ಭಾವುಕರನ್ನಾಗಿಸಿದೆ. ಈ ದೃಶ್ಯವನ್ನು ನೋಡಿರುವ ರಾಮಾಯಣ ಅಭಿಮಾನಿಗಳೂ ಅಷ್ಟೇ ಭಾವುಕರಾಗಿದ್ದಾರೆ.
